ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು. == ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ == == ಉಲ್ಲೇಖಗಳು == == ಹೊರಸಂಪರ್ಕ ಕೊಂಡಿಗಳು == ಭಾರತ ರತ್ನ ಎಂದರೇನು, ಮಾನದಂಡಗಳೇನು, ಅರ್ಹತೆಗಳೇನು?, ಪ್ರಜಾವಾಣಿ